ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೩

ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೩
ಕಂಭುಜ-
ಈ ಮೊದಲಿನ ಭಾಗ ೧ ಮತ್ತು ಭಾಗ ೨ ರಲ್ಲಿ ನಾವು ಈಗಾಗಲೇ ತಿಳಿದುಕೊಂಡಂತೆ ಬೌದ್ಧಧರ್ಮ ಮತ್ತು ಸಂಸ್ಕೃತಿಯು ನಮ್ಮ ಹಿಂದೂ ದೇಶದ(ಭಾರತ ದೇಶದ) ನೆಲದಿಂದ ಬಾಕ್ಟ್ರಿಯಾ(ಈಗಿನ ಅಪಘಾನಿಸ್ತಾನ),ಮಧ್ಯ ಏಶಿಯಾ, ಚೀನಾ, ಕೊರಿಯಾ, ಜಪಾನ್ ಮತ್ತು ಟಿಬೆಟ್ ಗಳಲ್ಲಿ ಪಸರಿಸಿತು. ಈ ಲೇಖನದಲ್ಲಿ  ಜಗತ್ ಪ್ರಸಿದ್ಧವಾದ ಕಂಬುಜ(ಹಿಂದೂ ಸಾಮ್ರಾಜ್ಯ) ಅಥವಾ ಕಾಂಬೋಡಿಯಾ ( ಪ್ರಪಂಚದ ಅದ್ಭುತಗಳಲ್ಲೊಂದೆನಿಸಿದ ಆಂಗ್ ಕೋರ್ ವಾಟ್ ಇಲ್ಲಿದೆ) ಮತ್ತು ಚಂಪಾ ಸಾಮ್ರಾಜ್ಯವೆಂದು ಕರೆಸಿಕೊಂಡ ದಕ್ಷಿಣ ವಿಯೆಟ್ ನಾಮ್ ಗಳ ಮೋಹಕವಾದ ಚರಿತ್ರೆಯ ಬಗ್ಗೆ ತಿಳಿಯುವ.

ಕಂಭುಜ – ಸಂಸ್ಕೃತ ಭಾಷೆಯಿಂದ ಬಂದ ಈ ಹೆಸರು ವರ್ತಮಾನ ಕಾಲದಲ್ಲಿ ಕಾಂಬೋಡಿಯಾವಾಗಿ ಪರಿವರ್ತಿತವಾಯಿತು.ಇಲ್ಲಿ  ಪ್ರಾದೇಶಿಕ ಭಾಷೆಯಲ್ಲದೆ ಫ್ರೆಂಚ್ ಭಾಷೆ ಬಳಕೆಯಲ್ಲಿದೆ.ನಮ್ಮ ದೇಶದ ವ್ಯಾಪಾರೀ  ನೌಕೆಗಳು ಪೂರ್ವಕರಾವಳಿ ರೇವುಗಳಿಂದ ಕ್ರಿ.ಪೂರ್ವದ ಕಾಲದಲ್ಲೇ ವಿವಿಧ ದೇಶಗಳಿಗೆ,  ದೂರದ ದೇಶಗಳಾದ ದಕ್ಷಿಣ ಪೂರ್ವ ಮತ್ತು ಪೂರ್ವ ಏಶಿಯಾದ ದ್ವೀಪರಾಷ್ಟ್ರಗಳಿಗೆ  ಹೋಗುತ್ತಿದ್ದವು. ನಮ್ಮ ಜಾತಕದ ಕಥೆಗಳಲ್ಲಿ, ಕಥಾಸರಿತ್ಸಾಗರದ ಕಥೆಗಳಲ್ಲಿ  ಭಾರತೀಯ ನಾವಿಕರು ಸುವರ್ಣ ಭೂಮಿ ಎಂದು ಕರೆಸಿಕೊಳ್ಳುತ್ತಿದ್ದ ಮಲಯ, ಇಂಡೊನೇಶಿಯ ಮೊದಲಾದ ದ್ವೀಪಗಳೆಡೆಗೆ ನಡೆಸುತ್ತಿದ್ದ ದುರ್ಗಮ ಸಮುದ್ರಯಾನಗಳನ್ನು  ಬಣ್ಣಿಸಲಾಗಿದೆ.
ಕ್ರಿ.ಶಕ ೨ನೇ ಶತಮಾನದ ಕಾಲದಿಂದ ಈ ಸುವರ್ಣಭೂಮಿಯಲ್ಲಿ ಭಾರತೀಯ ಮೂಲದ ಹಿಂದೂ ಧರ್ಮವು ಕಾಲಿಟ್ಟು, ಕ್ರಮೇಣ ಅಲ್ಲಿನ ರಾಜವಂಶಜರು  ಅದರ ಅನುಯಾಯಿಗಳಾದರು. ಹಿಂದೂ ಧರ್ಮವು ಅಲ್ಲಿ ೧೦೦೦ಕ್ಕೂ ಹೆಚ್ಚಿನ ವರ್ಷಗಳು  ನೆಲೆಯೂರಿ ಜನಜೀವನದಲ್ಲಿ ಹಾಸು ಹೊಕ್ಕಾಗಿತ್ತು. ಈ ಪವಾಡ ಅಲ್ಲಿ ಹೇಗೆ ನಡೆಯಿತು? ಇಸ್ಲಾಮ್ ಖಡ್ಗದ ಬಲದಿಂದ ಧರ್ಮ ಪ್ರಚಾರ ಮಾಡಿದರೆ ಕ್ರೈಸ್ತಧರ್ಮವು ಬೈಬಲ್ ಪುಸ್ತಕಗಳಿಂದ ತನ್ನ ಕೆಲಸ ಮಾಡಿತು.ನಮ್ಮ ಹಿಂದೂ ವರ್ತಕರು ತಾವಿದ್ದ ಹೊಸ ನಾಡಿನಲ್ಲಿ ಜನಮನವನ್ನು ಗೆದ್ದು ಅವರನ್ನುತಮ್ಮ ಧರ್ಮಕ್ಕೆ ಸೆಳೆದುಕೊಂಡರು. ಭಾರತೀಯ ಮೂಲದ  ವರ್ತಕ ಸಮುದಾಯದವರು ಮಲಯ, ಸುಮಾತ್ರಾ,ಜಾವಾ ದ್ವೀಪಗಳಲ್ಲಿ ತಳವೂರಿದರು.ಆಗ ಅವರು ತಮ್ಮೊಂದಿಗೆ ಧಾರ್ಮಿಕ ಕ್ರಿಯೆಗಳಿಗೆ ಪುರೋಹಿತ ವರ್ಗದವರನ್ನೂ ಕರೆದೊಯ್ದರು. ನಮ್ಮ ಬ್ರಾಹ್ಮಣ ವರ್ಗದವರು ಅಲ್ಲಿನ ರಾಜರ, ಜನಸಾಮಾನ್ಯರ ಮನ್ನಣೆಗೆ ಪಾತ್ರರಾಗಿ ಬಹಳ ಗೌರವಿಸಲ್ಪಟ್ಟರು. ಇದರಿಂದಾಗಿ ನಮ್ಮ ನಾಡಿನ ಸಾವಿರಾರು ಮಂದಿ ಬ್ರಾಹ್ಮಣರು ಅಲ್ಲಿ ನೆಲೆಯೂರುವಂತಾಯಿತು, ಅವರೊಂದಿಗೆ ಸಂಸ್ಕೃತ ಭಾಷೆ ಮತ್ತು ನಮ್ಮ ಹಿಂದೂ ಸಂಸ್ಕೃತಿ ಬೇರೂರಿತು.

ಕ್ರಿ.ಶಕ ೨ನೇ ಮತ್ತು ೫ನೇ ಶತಮಾನಗಳಲ್ಲಿ  ಮಲಯ(ಪರ್ಯಾಯ ದ್ವೀಪ), ಕಾಂಬೋಡಿಯಾ, ಅನ್ನಂ(ವಿಯೆಟ್ನಾಂ), ಸುಮಾತ್ರಾ, ಜಾವಾ, ಬಾಲಿ ಮತ್ತು ಬೋರ್ನಿಯೋಗಳಲ್ಲಿ ಹಿಂದೂ ರಾಜ್ಯಗಳು  ತಲೆಯೆತ್ತಿದವು.
ಚೀನಾ ದೇಶದ ಬರಹಗಾರರು ಉಲ್ಲೇಖಿಸಿದಂತೆ ಭಾರತೀಯ ಸಂಜಾತ ಕೌಂಡಿನ್ಯನೆಂಬ ಬ್ರಾಹ್ಮಣನೊಬ್ಬ ಕಂಭುಜದ ರಾಜಕುಮಾರಿಯೊಬ್ಬಳನ್ನು ವಿವಾಹವಾಗಿ ಅಲ್ಲಿನ ಹಿಂದೂ ರಾಜನಾದನು.(ಇದು ಸುಮಾರು ಕ್ರಿ.ಶ.೨-೩ನೇ ಶತಮಾನದ ಕಾಲದಲ್ಲಿ) .ನಂತರದ ದಿನಗಳಲ್ಲಿ ಅಲ್ಲಿನ ರಾಜ ವಂಶಜರು , ಮತ್ತು ಸಾಮಾನ್ಯ ಪ್ರಜೆಗಳು ಹಿಂದೂ ಧರ್ಮ, ಸಂಸ್ಕೃತಿ, ಅಚಾರ ವಿಧಿ ವಿಧಾನಗಳನ್ನು ಸ್ವೀಕರಿಸಿದರು. ಈ ವಿವರಗಳು ಕಂಭುಜದ ರಾಜಧಾನಿಯೆನಿಸಿಕೊಂಡಿದ್ದ ಭವಪುರದಲ್ಲಿ ದೊರಕಿದ ಸಂಸ್ಕೃತ ಭಾಷೆಯಲ್ಲಿದ್ದ ಲಿಖಿತ ದಾಖಲೆಗಳಲ್ಲಿ ಕೂಡಾ ಕಂಡು ಬಂದಿದೆ.ಮುಂಬರುವ ದಿನಗಳಲ್ಲಿ ಬ್ರಾಹ್ಮಣರು ಬಹು ಸಂಖ್ಯೆಯಲ್ಲಿ ವಲಸೆ ಹೋಗಿ ಅಲ್ಲಿನ ಹೆಣ್ಣು ಮಕ್ಕಳನ್ನು ವಿವಾಹವಾಗಿ ಅಲ್ಲೇ ನೆಲೆಯೂರಿದರು. ಚೀನೀಯರು ಕಂಭುಜವನ್ನು ಫುನಾನ್ ಎಂದು ಕರೆಯುತ್ತಿದ್ದರು. ಚೀನಾ ದೇಶದ ಇತಿಹಾಸಗಾರರು ಈ ಎಲ್ಲ ದೇಶದ ಬೆಳವಣಿಗೆಗಳನ್ನು ಮತ್ತು ವಿವರಗಳನ್ನು ಕ್ರಮಬದ್ಧವಾಗಿ ದಾಖಲಿಸಿದ್ದಾರೆ. ಆಗಿನ ಕಂಭುಜ ರಾಜರಿಗೆ ವರ್ಮನ್ ಎಂಬ ಉಪನಾಮಧೇಯವಿತ್ತು. ಪ್ರಸಿದ್ಧರಾದ ಕೆಲವು ರಾಜರುಗಳು ಜಯವರ್ಮನ್, ೨ನೇ ಮತ್ತು ೬ನೇ ಯಶೋ ವರ್ಮನ್ ಹಾಗೂ ಸೂರ್ಯವರ್ಮನ್. ಇವರೆಲ್ಲಾ  ಅಲ್ಲಿನ ಅಸಾಧಾರಣ ಹಿಂದೂ ರಾಜರು.ನಮ್ಮ ಹಿಂದೂ ವಲಸಿಗರು ಅಲ್ಲಿನ ಹೆಣ್ಣು ಮಕ್ಕಳನ್ನು ವಿವಾಹವಾಗುವಲ್ಲಿ ಅಪ್ರತಿಮರಾದರೆ ಚೀನೀಯರು ಅಂದಿನ ಆಗು ಹೋಗುಗಳನ್ನು, ಘಟನೆಗಳನ್ನು ದಾಖಲಿಸುವುದರಲ್ಲಿ  ಶ್ರೇಷ್ಠರೇ ಸರಿ ! ಆಗಿನ ರಾಜರುಗಳು ತಮ್ಮ ರಾಯಭಾರಿಗಳನ್ನು ನೆರೆಯ ದೇಶಗಳಾದ ಭಾರತ ಮತ್ತು ಚೀನಾಕ್ಕೆ ಕಳುಹಿದರು.
ಕಂಭುಜ ರಾಜ್ಯವು ಉಛ್ರಾಯ ಸ್ಥಿತಿಯಲ್ಲಿದ್ದಾಗ ಈಗಿನ ಥೈಲಾಂಡ್, ಬರ್ಮಾದ ಕೆಲವು ಭಾಗಗಳು, ಲಾವೋಸ್ ಇವೆಲ್ಲಾ ಸೇರಿ ಒಂದೇ ದೇಶವೆನಿಸಿತ್ತು. ಆ ಕಾಲದಲ್ಲಿ ಬರೆದ ಅನೇಕಾನೇಕ ಸಂಸ್ಕೃತ ಭಾಷೆಯಲ್ಲಿರುವ ಲಿಖಿತ ದಾಖಲೆ,ಶಾಸನಗಳಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಹಿಂದೂ ಸಾಮ್ರಾಜ್ಯವು ೧೫ನೇ ಶತಮಾನದ ವರೆಗೂ ಅಲ್ಲಿ ಮುಂದುವರಿಯಿತು. ಇತ್ತ ೧೨ನೇ ಶತಮಾನದ ಕಾಲದಲ್ಲಿ ಭಾರತದಲ್ಲಿ ಮುಸಲ್ಮಾನರ ಧಾಳಿಯಾದಾಗ ಅಲ್ಲಿನ್ನೂ ಹಿಂದೂ ಸಾಮ್ರಾಜ್ಯ ಮೆರೆಯುತ್ತಿತ್ತು. ಕೊನೆಗೆ ಈ ಸಾಮ್ರಾಜ್ಯ ಪಶ್ಚಿಮ ದಿಕ್ಕಿನಿಂದ ಥೈಲಾಂಡ್ ಮತ್ತು ಪೂರ್ವ ದಿಕ್ಕಿನಿಂದ ವಿಯೆಟ್ನಾಂ(ಅನ್ನಾಂ) ಧಾಳಿ ನಡೆಸಿದಾಗ ಕ್ಷೀಣಿಸಿತು. ಅದಾಗ್ಯೂ ಕ್ಷೀಣವಾಗಿಯಾದರೂ ಹಿಂದೂ ಧರ್ಮವು  ತೀರ ಇತ್ತೀಚಿನ ವರೆಗೆ ಅಲ್ಲಿ ಅಸ್ಥಿತ್ವದಲ್ಲಿತ್ತು. ಬೌದ್ಧ ಧರ್ಮೀಯರು ಸಾವಧಾನವಾಗಿ, ಸಂಘರ್ಷಗಳಿಲ್ಲದೆ ದೇಶವಿಡೀ ಆವರಿಸಿದರು. ಈಗ ೯೦% ಮಂದಿ ಕಾಂಬೊಡಿಯಾ ಪ್ರಜೆಗಳು ಬೌದ್ಧ ಧರ್ಮಾವಲಂಬಿಗಳು. ಆದರೆ ಹಿಂದೂ ಧರ್ಮದ ಪ್ರಭಾವವು ಅಲ್ಲಿ ಇನ್ನೂ ಅಸ್ಥಿತ್ವದಲ್ಲಿದೆ. ರಾಮಾಯಣದ ಕಥೆಗಳನ್ನು ಆಧರಿಸಿದ ನೃತ್ಯ ರೂಪಕಗಳು ಅಲ್ಲಿ ಜನಪ್ರಿಯ, ಜನರ ಹೆಸರು ಹೆಚ್ಚಿನವು ಸಂಸ್ಕೃತ ಭಾಷಾಧರಿತದವಾಗಿವೆ.

ಆಂಗ್ ಕೋರ್ ವಾಟ್- ಆಂಗ್ ಕೋರ್ ಎಂದರೆ ನಗರ ಎಂದರ್ಥ, ಇದು ಆಗಿನ ಕಾಲದಲ್ಲಿ ಆ ದೇಶದ ಅಧಿಕಾರದ ಕೇಂದ್ರಸ್ಥಾನವಾಗಿತ್ತು. (ವಾಟ್ ಎಂದರೆ ಕಂಬೋಡಿಯಾ ಭಾಷೆಯಲ್ಲಿ ಮಂದಿರ ಎಂದರ್ಥ) ಈ ದೇವಾಲಯವನ್ನು ೧೨ನೇ ಶತಮಾನದಲ್ಲಿ ೨ನೇ ಸೂರ್ಯವರ್ಮನ್ ಕಟ್ಟಿಸಿದನು. ಇದು ಪ್ರಪಂಚದ ಅದ್ಭುತಗಳಲ್ಲೊಂದೆನಿಸಿದೆ. ಈ ಮಂದಿರದಲ್ಲಿ  ಭಗವಾನ್ ವಿಷ್ಣುವನ್ನು ಪೂಜಿಸುತ್ತಿದ್ದರು. ದೇವಾಲಯವನ್ನು ಪರ್ವತದ ಮೇಲಿರುವಂತೆ ನಿರ್ಮಿಸಿದ್ದಾರೆ. ಪೂಜಾ ಮಂದಿರವನ್ನು  ಉನ್ನತ ಸ್ಥಾನದಲ್ಲಿ ಶಿಖರದಲ್ಲಿರುವಂತೆ ಕಟ್ಟಲಾಗಿದೆ.ಶಿಲ್ಪಕಲೆಯು ಬಹಳ ಸುಂದರವಾಗಿದೆ.ಅಲ್ಲಿಗೆ ಹತ್ತಿರದಲ್ಲೇ ಅಂಗ್ ಕೊರ್ ಥಾಮ್ ಪಟ್ಟಣದಲ್ಲಿ ಕಟ್ಟಲಾದ ಬಯಾನ್ ಮಂದಿರದಲ್ಲಿ ದೇವಾಲಯದ ಎತ್ತರಕ್ಕೆ ಗೋಡೆಗಳ ಮೈಮೇಲೆ ಮಾನವ ಮುಖಗಳನ್ನು ಕೆತ್ತಲಾಗಿದೆ. ಅದೇ ತೆರನಾಗಿ ಅಲ್ಲಿ ಸುತ್ತುಮುತ್ತಲಿನ ಪ್ರದೇಶಗಳಲ್ಲೆಲ್ಲಾ  ಬಹು ಸಂಖ್ಯೆಯಲ್ಲಿ ದೇವಾಲಯಗಳಿವೆ. (ಅಂತರ್ಜಾಲದಲ್ಲಿ ಅವುಗಳ ಭಾವ ಚಿತ್ರಗಳು ಲಭ್ಯವಿದೆ.)

ಆಂಗ್ ಕೋರ್ ಥಾಮ್ ನಲ್ಲಿರುವ ಬಯಾನ್ ಮಂದಿರ

ಚಂಪಾ ಹಿಂದೂಸಾಮ್ರಾಜ್ಯ-(ದಕ್ಷಿಣ ವಿಯೆಟ್ನಾಂ)

ಕ ಲೆ ಪಗೊಡ

ಚಂಪಾ ಹಿಂದೂ ಸಾಮ್ರಾಜ್ಯ ತನ್ನ ಪಶ್ಚಿಮದ ನೆರೆಯಲ್ಲಿರುವ ಕಂಭುಜ ದೇಶದಷ್ಟು ಪ್ರಾಮುಖ್ಯತೆ ಪಡೆಯಲಿಲ್ಲ.ಅದರ ಮೇಲೆ ದಾಖಲಿಸಿದ ಬರಹಗಳು, ಲಿಖಿತ ಶಾಸನಗಳು ತುಂಬ ಕಂಡು ಬರುವುದಿಲ್ಲ.ಈ ದೇಶದಲ್ಲಿ ಕಂಭುಜ ದೇಶದಲ್ಲಿ ಕಂಡುಬಂದಂತೆ ದೊಡ್ಡ ವಿಶೇಷವಾದ ದೇವಾಲಯಗಳು, ಸ್ಮಾರಕಗಳು ಕಂಡುಬರದಿರುವುದೇ ಅದಕ್ಕೇ ಕಾರಣವಿರಬಹುದು. ಈ ದೇಶದ ಇತಿಹಾಸವನ್ನು ಬರೆದವರು ಚೀನಾದ ಇತಿಹಾಸಕಾರರೇ. ಈ ದೇಶವು ಕ್ರಿಶ.೧೫೦ರಿಂದ ೧೪೭೧ರ ವರೆಗೆ ಬಾಳಿತು.ಇಲ್ಲಿನ ರಾಜರೂ ವರ್ಮಾ ಎಂಬ ಉಪನಾಮಧೇಯವನ್ನು ಹೊಂದಿದ್ದರು. ಇಲ್ಲಿನ ಕೆಲವು ಪ್ರಾಮುಖ್ಯ ರಾಜರು ರುದ್ರ ವರ್ಮನ್,ಹರಿವರ್ಮನ್, ಇಂದ್ರ ವರ್ಮನ್ ಮತ್ತು ಸಿಂಹ ವರ್ಮನ್. ಈ ರಾಜರುಗಳು ಪೂರ್ವದಿಂದ ಕಂಭುಜ ಮತ್ತು ಉತ್ತರದಿಂದ ಉತ್ತರ ಆನ್ನಂ (ವಿಯೆಟ್ನಾಂ)ದೇಶಗಳ ಆಕ್ರಮಣದ ಪ್ರಯತ್ನಗಳನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದರು.ಹಾಗಾಗಿ ಅವರು ಸುಮಾರು ೧೩೦೦ ವರ್ಷಗಳ ಕಾಲ ಅವರು ಯಾವುದೇ ಹೊರಗಿನ ಆತಂಕಗಳಿಲ್ಲದೆ ರಾಜ್ಯವಾಳಿದರು. ಬೌದ್ಧ ಧರ್ಮವು ಈ ದೇಶವನ್ನೂ ಪ್ರವೇಶಿಸಿತು.ಇದರಿಂದಾಗಿ ಈ ದೇಶದಲ್ಲಿ ಎರಡೂ ಧರ್ಮಗಳ ದೇವಾಲಯಗಳನ್ನು ಕಾಣಬಹುದು. ರಾಜಧಾನಿಯಾಗಿದ್ದ ಚಂಪಾಪಟ್ಟಣದ ಹೆಸರೇ ದೇಶಕ್ಕೂ ನೀಡಲಾಯಿತು. ಇಲ್ಲಿನ ರಾಯಭಾರಿಗಳು ಚೀನಾ ದೇಶಕ್ಕೆ ಹೋಗಿದ್ದಾರೆ, ಆದರೆ ಭಾರತ ದೇಶಕ್ಕೆ ಹೋಗಿಲ್ಲ. ೧೬ನೇ ಶತಮಾನದಲ್ಲಿ ಉತ್ತರದಿಂದ ಅನ್ನರ(ಮಂಗೋಲಿಯನ್ನರ) ಆಕ್ರಮಣಕ್ಕೆ ತತ್ತರಿಸಿ ಹಿಂದೂ ಸಾಮ್ರಾಜ್ಯವು ನಶಿಸಲಾರಂಭಿಸಿತು. ಕಾಲ ಕ್ರಮೇಣ ಬೌದ್ಧಧರ್ಮದ ಪ್ರಭಾವದಿಂದಾಗಿ ಹಿಂದೂ ಧರ್ಮವು ತೀರ ನಶಿಸಿತು.

https://shailajasbhat.wordpress.com/2010/03/01/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0/  .  ಇದು  ಮೊದಲನೇ ಭಾಗ

https://shailajasbhat.wordpress.com/2010/04/07/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0-2/  ಇದು ಎರಡನೇ ಭಾಗ

ಇದರೊಳಗಿನ ಎಲ್ಲಾ ಚಿತ್ರಗಳನ್ನು ಅಂತರ್ಜಾಲದಿಂದ ಆರಿಸಿಕೊಳ್ಳಲಾಗಿದೆ.

2 thoughts on “ಡಾ.ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ:ಮರೆತು ಹೋದ ಕಥೆ – ಭಾರತೀಯ ಸಂಸ್ಕೃತಿ ಏಶಿಯಾ ಖಂಡದಾದ್ಯಂತ ಹಬ್ಬಿದ ಪರಿ-ಭಾಗ ೩

ನಿಮ್ಮ ಟಿಪ್ಪಣಿ ಬರೆಯಿರಿ