ಡಾ. ವಿ.ಎಸ್. ಗೋಪಾಲಕೃಷ್ಣನ್ ಚರಿತ್ರೆಯಾಳದಲ್ಲಿ ಇಳಿದಾಗ—ಇಂಡೊನೇಶಿಯಾ ಇನ್ನೊಂದು ಭಾರತವಾಗಿತ್ತು…..ಮರೆತು ಹೊದ ಕಥೆ -ಭಾಗ ೪
ಈ ಮೊದಲಿನ ಮೂರು ಭಾಗಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಅದರ ಅವಿಭಾಜ್ಯ ಅಂಗವಾದ ಆಚಾರ-ವಿಚಾರ ವಿಶೇಷಣಗಳು ಹೇಗೆ ಅಪಘಾನಿಸ್ತಾನ , ಮಧ್ಯ ಏಶಿಯಾ, ಚೀನಾ,ಕೊರಿಯಾ, ಜಪಾನ್ ಮತ್ತು ಆಗ್ನೇಯ ಏಶಿಯಾದ ಪ್ರಮುಖ ದೇಶಗಳಲ್ಲಿ ಸ್ವೀಕರಿಸಲ್ಪಟ್ಟಿತು ಎಂಬುವುದನ್ನು ಕಂಡೆವು.
ಈ ನಾಲ್ಕನೇ ಭಾಗದಲ್ಲಿ ಕೇವಲ ೫೦೦ ವರ್ಷಗಳ ಹಿಂದಿನ ವರೆಗೆ ನಮಗೆ ನಂಬಲೂ ಅಸಾಧ್ಯವೆಂಬಷ್ಟು ,ಇನ್ನೊಂದು ಭಾರತ ದೇಶ ಎನ್ನಬಹುದಾದಷ್ಟು ನಮ್ಮ ಸಂಸ್ಕೃತಿಯೊಡನೆ ವಿಲೀನವಾಗಿದ್ದ ಇಂಡೊನೇಶಿಯಾದ ಬಗ್ಗೆ ನೋಡೋಣ. ೧೨ನೆ ಶತಮಾನದಲ್ಲಿ ಭಾರತ ಸ್ವತಃ (೮೦೦ ವರ್ಷಗಳ ಹಿಂದೆ) ಮುಸಲ್ಮಾನರ ಧಾಳಿಗೆ ಸಿಲುಕಿದ್ದ ಸಂದರ್ಭದಲ್ಲಿ ಇಂಡೋನೇಶಿಯಾದಲ್ಲಿ ಹಿಂದೂ ಮತ್ತು ಬೌದ್ಧ ಸಂಸ್ಕೃತಿ ಹಬ್ಬಿತ್ತು ಮತ್ತು ಬಹುಮಂದಿ ಅದರ ಅನುಯಾಯಿಗಳಾಗಿದ್ದರು. ಇದು ಕೇವಲ ೫೦೦ ವರ್ಷಗಳ ಹಿಂದಿನ ಮಾತು, ಆದರೆ ಈಗ ನಂಬಲಸಾಧ್ಯವೆನಿಸುತ್ತದೆ.
ಲೇಖಕರಾದ ವಿ.ಎಸ್.ಗೋಪಾಲಕೃಷ್ಣನ್ ರವರು ಐ.ಎ.ಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ೧೯೭೯ರಲ್ಲಿ ಇಂಡೊನೇಶಿಯಾದಲ್ಲಿ ಜರುಗಿದ ಯುನೆಸ್ಕೋದ(UNESCO) ಪ್ರಾದೇಶಿಕ ಸಮ್ಮೇಳನವೊಂದರಲ್ಲಿ ಅಂದಿನ (INFORMATION & BROADCAST) ಮಂತ್ರಿವರ್ಯ ಎಲ್.ಕೆ.ಅದ್ವಾನಿಯವರೊಡನೆ ಭಾಗವಹಿಸಿದ್ದರು.ಆ ಸಂದರ್ಭದಲ್ಲಿ ಅಲ್ಲಿನ INFORMATION & BROADCAST ಮಂತ್ರಿಮಹೋದಯರು
ಮುಸ್ಲಿಂ ಧರ್ಮಾನುಯಾಯಿಗಳು ಸಂಸ್ಕೃತ ಭಾಷೆಯಲ್ಲಿ ಕಿಂಚಿತ್ತೂ ತಡೆಯಿಲ್ಲದೇ ನಿರರ್ಗಳವಾಗಿ ಮಾತನಾಡಿದರು.ಆ ಒಂದು ಪ್ರಸಂಗ ಕೇವಲ ಅಪರೂಪದ್ದಿರಬಹುದಾದರೂ ,ಆ ದೇಶದಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆ ಕಲೆತು ಹೋದುದನ್ನು ಕಂಡು ಅವರಿಬ್ಬರೂ ಮೂಕ ವಿಸ್ಮಿತರಾದರು. ಆ ನಂತರ ಲೇಖಕರು ಇನ್ನೊಮ್ಮೆ ಆ ದೇಶದ ರಾಜಧಾನಿಯೆಸಿಕೊಂಡ ಜಕಾರ್ತಾಕ್ಕೆ (Djakarta )೧೯೯೫ ರಲ್ಲಿ ಭೇಟಿಯಿತ್ತ ಸಂದರ್ಭದಲ್ಲಿ ಅಲ್ಲಿನ ಪ್ರಾದೇಶಿಕ ಪ್ರಾಚೀನ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದರು, ಅಲ್ಲಿ ಅವರಿಗೆ ಪುನಃ ಕಾದಿತ್ತು ಅಚ್ಚರಿ, ಅವರು ಕಂಡದ್ದೇನು- ಬೇರೆ ಶಿಲ್ಪಕಲಾಕೃತಿಗಳೊಂದಿಗೆ ನಮ್ಮ ಪೌರಾಣಿಕ ಕಥೆಗಳಲ್ಲಿ ಬರುವ ಪಾತ್ರಗಳಾದ ಗರುಡ,ವಿಷ್ಣು, ಹನುಮಾನ್ ಇತ್ಯಾದಿ.
ಅವರಿಗೆ ತಾನು ಭಾರತದ ವಸ್ತು ಸಂಗ್ರಹಾಲಯದಲ್ಲಿದ್ದೇನೋ ಎಂಬಂತೆ ಭಾಸವಾಯಿತು.ಇಸ್ಲಾಂ ಧರ್ಮದಲ್ಲಿ ಯಾವುದೇ ತೆರನಾದ ಮೂರ್ತಿ ಪೂಜೆ ನಿಷಿದ್ಧ , ಹಾಗಾಗಿ ಇದು ಅವರ ಹಿಂದೂ ಧರ್ಮಾವಲಂಬಿಗಳಾದ ಪೂರ್ವಜರ ಅವಶೇಷಗಳು. ಅಲ್ಲಿನ ವೈಮಾನಿಕ ಸಂಸ್ಠೆ “ಗರುಡ” (Garuda Airways).
ಕ್ರಿಸ್ತ ಪೂರ್ವ ಕಾಲದಲ್ಲೇ ಈ ದ್ವೀಪಸಮೂಹವು ನಮ್ಮ ದೇಶದವರಿಗೆ ಸುವರ್ಣಭೂಮಿಯೆಂದು ಪರಿಚಿತ. ನಮ್ಮ ಸಮುದ್ರಯಾನೀ ವರ್ತಕರು ಈ ದ್ವೀಪಗಳೊಂದಿಗೆ ವ್ಯಾಪಾರ ಸಂಪರ್ಕವನ್ನಿಟ್ಟುಕೊಂಡಿದ್ದರು. ನಮ್ಮ ದೇಶದ ನಾವೆಗಳು ವ್ಯಾಪಾರಕ್ಕೋಸ್ಕರ ಅಲ್ಲಿಗೆ ಪಯಣಿಸುತ್ತಿದ್ದವು, ಹಾಗೂ ನಮ್ಮ ವರ್ತಕರು ಅಲ್ಲಿನ ಬಂದರುಪ್ರದೇಶಗಳಲ್ಲಿ ನೆಲೆಯೂರಿದ್ದರು.(ಬ್ರಿಟಿಷ್ ಈಸ್ಟ್ ಇಂಡಿಯಾದ ವ್ಯಾಪಾರಿಗಳು ನಮ್ಮ ಮುಂಬಯಿ,ಮದ್ರಾಸ್ ಗಳಲ್ಲಿ ನೆಲೆಯೂರಿದ್ದಂತೆ!). ಇವರೊಂದಿಗೆ ಧಾರ್ಮಿಕ ವಿಧಿ-ವಿಧಾನಗಳ ಆಚರಣೆಗಳಿಗೆ ಬ್ರಾಹ್ಮಣರನ್ನೂ ಕರೆದೊಯ್ದಿದ್ದರು. ಆ ದೇಶದಲ್ಲಿ ನಮ್ಮ ನಾಡಿನ ಬ್ರಾಹ್ಮಣರಿಗೆ ತುಂಬಾ ಗೌರವ ದೊರಕುತ್ತಿತ್ತು. ಅವರ ವಿದ್ಯೆ, ಪಾಂಡಿತ್ಯಗಳಿಗೆ ಮನ್ನಣೆಯೂ ದೊರೆಯಿತು.ಹಾಗೂ ಜನರು ಅವುಗಳನ್ನು ಅನುಸರಿಸಲು ,ತಿಳಿದುಕೊಳ್ಳಲು ಬಯಸಿದರು. ಹೀಗೆ ಕಾಲಕ್ರಮೇಣ ಹಿಂದೂ ಧರ್ಮವು ಪ್ರಚಾರಕ್ಕೆ ಬಂದಿತು.ಒಟ್ಟೊಟ್ಟಿಗೆ ಮಹಾಯಾನ ಬೌದ್ಧಧರ್ಮವೂ ಈ ದೇಶವನ್ನು ಪ್ರವೇಶ ಮಾಡಿತು. ಇದು ನಮ್ಮ ದೇಶದ ಬೌದ್ಧ ಸನ್ಯಾಸಿಗಳ ಧರ್ಮಪ್ರಚಾರಕ್ಕಾಗಿ ನಡೆಸಿದ ಸಮುದ್ರಯಾನದ ಪ್ರಭಾವ.ಇಲ್ಲಿನ ಶೈಲೇಂದ್ರ ರಾಜ ವಂಶವು ಮಹಾಯಾನ ಬೌದ್ಧ ಧರ್ಮವನ್ನು ಅನುಸರಿಸಿದರು.ಇವರೇ ಶೈಲೇಂದ್ರ ಸಾಮ್ರಾಜ್ಯದ ನಿರ್ಮಾತೃ, ಇದುವೇ ಆ ಪ್ರದೇಶದ ಪ್ರಪ್ರಥಮ ದೊಡ್ಡ ಸಾಮ್ರಾಜ್ಯವಾಗಿತ್ತು.


ಶೈಲೇಂದ್ರ ಸಾಮ್ರಾಜ್ಯ-ಈ ರಾಜವಂಶವು ಕ್ರಿ.ಶಕ ೮ನೇ ಶತಮಾನದಲ್ಲಿ ತಲೆಯೆತ್ತಿತು. ಜಾವಾದ್ವೀಪದ ಮಧ್ಯದ ಪ್ರದೇಶವು ಈ ರಾಜರ ಕಾರ್ಯಸ್ಥಾನ ,ರಾಜ್ಯದ ಕೇಂದ್ರ ಬಿಂದುವಾಗಿತ್ತು.ಈ ಸಾಮ್ರಾಜ್ಯವು ಸುಮಾತ್ರಾ,ಬಾಲಿ,ಬೋರ್ನಿಯೋ ಮತ್ತು ಮಲಯಾ ದ್ವೀಪಗಳಲ್ಲಿ ಆವರಿಸಿತ್ತು.ಈ ಸಾಮ್ರಾಜ್ಯದ ವಿವರಗಳು ಅಲ್ಲಿ ದೊರಕಿದ ಪ್ರಾದೇಶಿಕ ಲಿಖಿತ ಬರಹಗಳು, ಶಿಲಾಶಾಸನಗಳಿಂದ ಕಂಡು ಬರುತ್ತವೆ.ಆಗಿನ ಕಾಲದಲ್ಲಿ ಸಮುದ್ರ ಯಾನ ಮಾಡುತ್ತಿದ್ದ ಅರಬ್ಬೀ ವರ್ತಕರ ಬರಹಗಳಲ್ಲೂ ಇದರ ಮೇಲೆ ಉಲ್ಲೇಖಿಸಿದ್ದಾರೆ.ಈ ವಂಶದವರೆಲ್ಲರೂ ಬೌದ್ಧಧರ್ಮದ ಅನುಯಾಯಿಗಳು. ಇವರು ಅತ್ಯಂತ ಹೆಚ್ಚಿನ ಅಧಿಕಾರವನ್ನು ಹೊಂದಿದ್ದದವನನ್ನು ಮಹಾರಾಜ ಎಂದು ಕರೆಯುತ್ತಿದ್ದರು, ಮತ್ತು ಮಹಾರಾಜನ ಅಧಿಕಾರ, ಪ್ರಭಾವ ಅಪರಿಮಿತವಾಗಿದ್ದವು,ಅವನು ಎಲ್ಲರಿಗಿಂತಲೂ ಉನ್ನತ ಸ್ಥಾನದಲ್ಲಿದ್ದನು.ಇವನ ಕೆಳಗಿದ್ದ ನೌಕಾ ಪಡೆಯು ಅಗಾಗ ನೆರೆಯ ಲ್ಲಿದ್ದ ಕಂಭುಜ , ಚಂಪಾ ದೇಶಗಳ ಮೇಲೆ ಧಾಳಿಯಿಡುತ್ತಿದ್ದವು. ಈ ಮಹಾರಾಜ ಎಂದೆನಿಸಿಕೊಂಡವನು ದಿನಾ ಒಂದು ಚಿನ್ನದ ಇಟ್ಟಿಗೆಯನ್ನು ಸರೋವರಕ್ಕೆಸೆಯುತ್ತಿದ್ದನೆಂಬ ವರ್ಣನೆಯಿದೆ. ಚೀನಾ ಮತ್ತು ಭಾರತ ದೇಶದ ರಾಜರು, ಅಧಿಕಾರಿಗಳು ಇವರ ಮಹಾರಾಜನನ್ನು ಭಯ-ಭಕ್ತಿ ಗೌರವಗಳಿಂದ ಕಾಣುತ್ತಿದ್ದರು. ಈ ರಾಜರು ಭಾರತ ಮತ್ತು ಚೀನಾ ದೇಶಗಳೊಡನೆ ನಿಕಟ ರಾಜಕೀಯ ಸಂಬಂಧ ಮತ್ತು ಸಂಪರ್ಕವನ್ನಿಟ್ಟುಕೊಂಡಿದ್ದರು.ಪಾಲ ರಾಜರು ಬಂಗಾಳವನ್ನಾಳುತ್ತಿದ್ದಾಗ ಈ ರಾಜ್ಯದಲ್ಲಿ ಬೌದ್ಧ ಧರ್ಮದ ಪ್ರವೇಶವಾಯಿತು. ಪಾಲರಾಜರು ಸ್ವತಃ ಬೌದ್ಧ ಧರ್ಮಾವಲಂಬಿಗಳಾದುದರಿಂದ ಧರ್ಮಪ್ರಚಾರಕ್ಕೆ ಪ್ರೋತ್ಸಾಹವನ್ನಿತ್ತರು. ಶೈಲೇಂದ್ರ ರಾಜನಾಗಿದ್ದ ಬಾಲಪುತ್ರದೇವ ತನ್ನ ರಾಯಭಾರಿಯನ್ನು ಪಾಲರಾಜ ದೇವಪಾಲನ ಆಸ್ಥಾನಕ್ಕೆ ಕಳುಹಿಸಿದ್ದನು. ಆಗಿನ ಕಾಲದಲ್ಲಿ ಬಂಗಾಳ ಪ್ರಾಂತ್ಯವು ಮಹಾಯಾನ ಪಂಥದ ಕೇಂದ್ರಸ್ಥಾನವಾಗಿತ್ತು ಮತ್ತು ಇದರ ಪ್ರಭಾವು ಬಹಳ ದೂರದ ವರೆಗೆ ಶೈಲೇಂದ್ರ ಸಾಮ್ರಾಜ್ಯದ ವರೆಗೂ ಹಬ್ಬಿತ್ತು. ಕುಮಾರಘೋಷನೆಂಬ ಬೌದ್ಧ ಸನ್ಯಾಸಿ ಬಂಗಾಳದಿಂದ ಹೋಗಿ ,ಶೈಲೇಂದ್ರ ರಾಜನಿಗೆ ಸಲಹಾಗಾರನಾಗಿ ನೇಮಿಸಲ್ಪಟ್ಟನು.
ಬೊರೊಬುದುರ್(ಜಾವಾ ದ್ವೀಪದ) ನಲ್ಲಿರುವ ಬುದ್ಧಮಂದಿರ
ಈ ರಾಜರೇ ಪ್ರಪಂಚಪ್ರಸಿದ್ಧವಾದ ಬೊರೊಬುದುರ್(ಜಾವಾ ದ್ವೀಪದಲ್ಲಿ) ನಲ್ಲಿರುವ ಬುದ್ಧಮಂದಿರವನ್ನು ಕಟ್ಟಿಸಿದರು. ಇದನ್ನು ಕ್ರಿ.ಶ.೭೫೦-೮೫೦ರ ಮಧ್ಯದಲ್ಲಿ ಕಟ್ಟಿಸಲಾಯಿತು. ಇದು ಈಗ ಪ್ರಪಂಚದ ೮ನೇ ಅದ್ಭುತವೆನಿಸಿದೆ.
ಈ ಬುದ್ಧಮಂದಿರ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಎರಡೂ ದೃಷ್ಟಿಗಳಿಂದ ತುಂಬಾ ಸುಂದರ ಮತ್ತು ಶ್ರೀಮಂತವೆನಿಸಿಕೊಂಡಿದೆ. ಇದನ್ನು ವೀಕ್ಷಿಸಲು ವರ್ಷವು ಲಕ್ಷಾನುಗಟ್ಟಲೆ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೋರೊಬುದುರ್ ಮತ್ತು ಕಂಬೋಡಿಯಾದ ಆಂಗ್ ಕೋರ್ ವಾಟ್ ಆಗ್ನೇಯ ಏಶಿಯಾದ ಅದ್ಭುತ ಮತ್ತು ಪ್ರೇಕ್ಷಣೀಯ ಸ್ಥಳಗಳೆನಿಸಿಕೊಂಡಿವೆ.
ಬುದ್ಧ ಸ್ತೂಪ
ಈ ಮಂದಿರದಿಂದ ಸುಮಾರು ೫೦ಮೈಲಿಗಳ ದೂರದಲ್ಲಿ ಪ್ರಂಬನಂ ಹಿಂದೂ ದೇವಾಲಯ ಸಂಕೀರ್ಣವಿದೆ (PRAMBANAM HINDU TEMPLE COMPLEX). ಇದರ ರಚನೆ,ವಿಶಾಲ ಆವರಣ, ಶಿಲ್ಪ ಮತ್ತು ವಾಸ್ತು ಕೌಶಲ್ಯಗಳು ವರ್ಣನಾತೀತ. ಇದು ದೊಡ್ಡ ಪ್ರವಾಸೀ ಕೇಂದ್ರ. ಇದರನ್ನು ೧೦ನೇ ಶತಮಾನದಲ್ಲಿ ರಚಿಸಿದರು. ಇದರ ಆವರಣದಲ್ಲಿ ಹಲವಾರು ಮಂದಿರಗಳಿರುವ ಕಾರಣ ಇದನ್ನು ದೇವಾಲಯ ಸಂಕೀರ್ಣ ಎಂದು ಹೇಳಲಾಗುತ್ತದೆ. ಇದನ್ನು ಯುನೆಸ್ಕೊದವರು ಈ ವಿಶ್ವದ ಮಾನವತೆಗೆ ಪೂರ್ವಜರಿಂದ ಬಂದ ಬಳುವಳಿ
( HERITAGE SITE) ಎಂದು ಘೋಷಿಸಿದ್ದಾರೆ.
ಶಿವ ದೇವಾಲಯ
ದೇವಾಲಯದ ಗೋಪುರ
೧೧ನೇ ಶತಮಾನದ ಕಾಲದಲ್ಲಿ ಶೈಲೇಂದ್ರ ಸಾಮ್ರಾಜ್ಯ ದಕ್ಷಿಣ ಭಾರತದ ಚೋಳ ರಾಜ ಒಂದನೇ ರಾಜೇಂದ್ರನ ಆಕ್ರಮಣಕ್ಕೆ ಒಳಗಾಗಿ ಸುಮಾರು ೧೦೦ವರ್ಷಗಳ ಕಾಲ ಅವರ ಅಧೀನದಲ್ಲಿತ್ತು. ಆ ರೀತಿಯ ಯುದ್ಧ ,ಆಕ್ರಮಣಗಳನ್ನು ರಾಜರು ಸಂಪತ್ತಿಗಾಗಿ, ರಾಜ್ಯ ತಮ್ಮ ಅಧೀನದಲ್ಲಿದ್ದಾಗ ವರ್ಷವೂ ಕಪ್ಪ ಕಾಣಿಕೆಗಳನ್ನು ಪಡೆಯಲು ಮಾಡುತ್ತಿದ್ದರು. ಆದರೆ ಚೋಳರ ಈ ವಿಶಾಲ ಸಾಮ್ರಾಜ್ಯ ೧೦೦ ವರ್ಷಗಳಲ್ಲಿ ಕುಸಿಯಿತು. ಆ ನಂತರ ಶೈಲೇಂದ್ರ ರಾಜ ಸ್ವತಃ ರಾಜ್ಯ ವಿಸ್ತರಣೆಗೆಂದು ನೌಕಾ ಪಡೆಯೊದಿಗೆ ಶ್ರೀಲಂಕಾದ ಮೇಲೆ ಧಾಳಿ ಮಾಡಿದನು. ಇದರ ಸೋಲಿನೊಂದಿಗೆ ಕ್ರಮೇಣ ಶೈಲೇಂದ್ರ ಸಾಮ್ರಾಜ್ಯ ದುರ್ಬಲವಾಗಹತ್ತಿತು. ೧೪ನೇ ಶತಮಾನಕ್ಕಾಗುವಾಗ ಇಡೀ ಸಾಮ್ರಾಜ್ಯವೇ ಕುಸಿಯಿತು.
ಶ್ರೀವಿಜಯ ಸಾಮ್ರಾಜ್ಯ -ಈ ಹಿಂದೂ ಸಾಮ್ರಾಜ್ಯವು ಸುಮಾತ್ರಾದಲ್ಲಿದ್ದಿತು.ಇದು ೭ನೇ ಶತಮಾನದಲ್ಲಿ ಉದಯವಾಯಿತು. ಇದು ಕೇವಲ ಒಂದು ಶತಮಾನ ಕಾಲ ಅಸ್ಥಿತ್ವದಲ್ಲಿತ್ತು, ಶೈಲೇಂದ್ರ ರಾಜರು ಅಧಿಕಾರಕ್ಕೆ ಬಂದಾಗ ಅವರು ಈ ರಾಜ್ಯವನ್ನು ವಶಪಡಿಸಿ ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ಹೀಗೆ ಈ ಹಿಂದೂ ಸಾಮ್ರಾಜ್ಯದೊಂದಿಗೆ ಶೈಲೇಂದ್ರ ಸಾಮ್ರಾಜ್ಯದ ಉದಯವಾಯಿತು.
ಮಹಾಪಜಿತ್ ಸಾಮ್ರಾಜ್ಯ- ೧೩ನೇ ಶತಮಾನದ ಕಾಲದಲ್ಲಿ ಶೈಲೇಂದ್ರರಾಜರು ಜಾವಾದ ಮಧ್ಯಭಾಗವನ್ನು ತಮ್ಮ ಅಧಿಕಾರ ಕೇಂದ್ರವನ್ನಾಗಿಸಿ ರಾಜ್ಯಭಾರ ಮಾಡುತ್ತಿದ್ದರು.ಅದು ಕುಸಿಯಲಾರಂಭಿಸಿದಾಗ ಜಾವಾದ ಪೂರ್ವ ಪ್ರಾಂತ್ಯವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಮಹಾಪಜಿತ್ ಸಾಮ್ರಾಜ್ಯದ ಉದಯವಾಯಿತು. ಇದು ಹಿಂದೂ ಸಾಮ್ರಾಜ್ಯ, ರಾಜರು ಹಿಂದುಧರ್ಮಾವಲಂಬಿಗಳು. ಈ ಸಾಮ್ರಾಜ್ಯ ಈಗಿನ ಇಂಡೊನೇಶಿಯ,ಮಲಯಗಳನ್ನು ಒಳಗೊಂಡಿತ್ತು. ಮಲಾಕ್ಕಾದ ೨ನೇ ರಾಜ ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದಾಗ ಈ ದೇಶದಲ್ಲಿ ಹೊಸ ಧರ್ಮದ ಪ್ರವೇಶವಾಯಿತು. ಕ್ರಮೇಣ ಇಸ್ಲಾಂ ದೇಶವಿಡೀ ಹಬ್ಬಿತು, ಇದರ ಪ್ರಾಭಲ್ಯವು ಶಾಂತ ರೀತಿಯಲ್ಲಿ ಹೆಚ್ಚಿ ಇಂಡೊನೇಶಿಯಾವು ಹೊಸ ಧರ್ಮವನ್ನಪ್ಪಿ, ಹಿಂದು ಸಾಮ್ರಾಜ್ಯವೇ ನಶಿಸಿತು. ಆಗ ಹಿಂದೂ ರಾಜ ಮತ್ತು ಹಿಂದೂ ಧರ್ಮಾವಲಂಬಿಗಳಾಗಿದ್ದ ಪ್ರಜೆಗಳು
ಬಾಲಿ ದ್ವೀಪದಲ್ಲಿ ಆಶ್ರಯ ಪಡೆದರು. ಈಗಲೂ ಬಾಲಿ ದ್ವೀಪದಲ್ಲಿ ಪ್ರಜೆಗಳು ಹಿಂದೂ ಹಬ್ಬಗಳನ್ನು, ಅಚಾರ-ವಿಚಾರಗಳನ್ನು, ಪದ್ಧತಿಗಳನ್ನು ಅನುಸರಿಸುತ್ತಾರೆ. ಇದು ನಮ್ಮ ದೇಶದವರಿಗೆ ಹೆಮ್ಮೆಯ ವಿಚಾರವೇ ಸರಿ. ಹಾಗಾಗಿ ಆ ಹಳೇ ದಿನಗಳಲ್ಲಿ ಆ ದ್ವೀಪಗಳು ಹಿಂದೂ ದ್ವೀಪ ಸಮೂಹವೆಂದು ಕರೆಸಿಕೊಂಡದ್ದರಲ್ಲಿ ಆಶ್ಚರ್ಯದ ವಿಷಯವೇನಿಲ್ಲ.
ವಿ.ಸೂ.-ಇದರೊಳಗಿರುವ ಎಲ್ಲಾ ಚಿತ್ರಗಳನ್ನೂ ಅಂತರ್ಜಾಲದಿಂದ ಆಯ್ದುಕೊಳ್ಳಲಾಗಿದೆ.
http://shailajasbhat.wordpress.com/2010/03/01/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0/ .
ಇದು ಮೊದಲನೇ ಭಾಗ
http://shailajasbhat.wordpress.com/2010/04/07/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0-2/
ಇದು ಎರಡನೇ ಭಾಗ
http://shailajasbhat.wordpress.com/2011/02/04/%E0%B2%A1%E0%B2%BE-%E0%B2%B5%E0%B2%BF-%E0%B2%8E%E0%B2%B8%E0%B3%8D-%E0%B2%97%E0%B3%8B%E0%B2%AA%E0%B2%BE%E0%B2%B2%E0%B2%95%E0%B3%83%E0%B2%B7%E0%B3%8D%E0%B2%A3%E0%B2%A8%E0%B3%8D-%E0%B2%9A%E0%B2%B0-3/
ಇದು ಮೂರನೇ ಭಾಗ
































ನ್ಯಿಂಗ್ಮಾ( NYINGMA ) ಪಂಗಡವು ಗುರು ರೀನ್ ಪೋಚೆಯವರ ಬೋಧನೆಯನ್ನು ಆಧರಿಸಿ ಹುಟ್ಟಿಕೊಂಡಿತು. ಇಲ್ಲಿ ವಿವರಗಳನ್ನು ಕೈಬಿಡಲಾಗಿದೆ, ಕೇವಲ ಮುಖ್ಯಾಂಶಗಳನ್ನು ಮಾತ್ರಹೇಳುತ್ತೇನೆ.















